Рет қаралды 4
2023ನೇ ಸಾಲಿನ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ದೆಹಲಿಯಲ್ಲಿಂದು ಪ್ರದಾನ ಮಾಡಿದರು.
ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಜಲ ಸಂರಕ್ಷಣೆ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳು ಕೈಗೊಂಡಿರುವ ವಿನೂತನ ಕ್ರಮಗಳು ಆಶಾದಾಯಕವಾಗಿದ್ದು, ಅನ್ಯ ರಾಜ್ಯಗಳಿಗೆ ಪ್ರೇರಣೆಯಾಗಿವೆ. ಜಲ ಸಂರಕ್ಷಣೆಯ ಪದ್ಧತಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಕೇಂದ್ರ ಜಲಶಕ್ತಿ ಸಚಿವಾಲಯ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಪ್ರಾಚೀನ ಕಾಲದಿಂದಲೂ ಜಲಮೂಲಗಳ ಸನಿಹದಲ್ಲಿ, ನದಿಗಳ ತಟದಲ್ಲಿ ಸಂಸ್ಕೃತಿಗಳು ವಿಕಾಸವಾಗಿರುವುದನ್ನು ಕಾಣಬಹುದು. ಜಗತ್ತಿನಲ್ಲಿ ಸಿಹಿನೀರಿನ ಮೂಲಗಳು ಅತ್ಯಂತ ಸೀಮಿತವಾಗಿವೆ, ಆದರೂ ನೀರಿನ ಬಗ್ಗೆ ಉಪೇಕ್ಷೆ ಮನೆಮಾಡಿದ್ದು, ಜಲದ ಮಹತ್ವವನ್ನು ಮರೆತಿದ್ದೇವೆ ಎಂದು ವಿಷಾದಿಸಿದರು.
ಜಲಮೂಲಗಳನ್ನು ಮಾಲಿನ್ಯದಿಂದ ರಕ್ಷಿಸಬೇಕು. ನೀರು ಮಾನವನ ಮೂಲಭೂತ ಅಗತ್ಯವಾಗಿದ್ದು, ಶುದ್ಧ ನೀರಿನಿಂದ ಆರೋಗ್ಯಯುತ ಸಮಾಜದ ನಿರ್ಮಾಣ ಸಾಧ್ಯ. ಕೇಂದ್ರ ಸರ್ಕಾರ ನೀರಿನ ಸಂರಕ್ಷಣೆಗೆ ಅನೇಕ ಶ್ಲಾಘನೀಯ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಜಲ ಜೀವನ ಮಿಷನ್ ನಂತಹ ಯೋಜನೆಯಿಂದ ಗ್ರಾಮೀಣ ಜನರ ಜೀವನದಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದರು.
ಜಲಮೂಲಗಳ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ, ಸಾಮೂಹಿಕ ಜವಾಬ್ದಾರಿಯಾಗಿದೆ. ಈ ಕಾರ್ಯದಲ್ಲಿ ದೇಶದ ನಾಗರಿಕರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಜಲಶಕ್ತಿ ಖಾತೆ ರಾಜ್ಯ ಸಚಿವ ಸಿ.ಆರ್.ಪಾಟೀಲ್, ಸಮುದಾಯದ ಸಹಭಾಗಿತ್ವ, ವಿನೂತನ ಕ್ರಮಗಳ ಮೂಲಕ ಪರಿಣಾಮಕಾರಿಯಾಗಿ ಜಲ ಸಂರಕ್ಷಣೆ ಮಾಡಬಹುದು. ಕೆರೆ, ಬಾವಿಗಳು, ಜಲಮೂಲಗಳ ನವೀಕರಣ, ರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದ್ದು, ಜನರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಹೇಳಿದರು.
#LiveDDChandanaNews #DDChandanaNews #DDChandana #DDKannada