Рет қаралды 4,005
ಕನ್ನೇರಿ ಶ್ರೀಗಳಿಂದ ಮನವಿ: ಯುಗಾದಿಯ ಪಾಡ್ಯಮಿ ದಿವಸ: ಭೂಮಿ (ಮಣ್ಣು) ಸುಪೋಷಣ ಮತ್ತು ಸಂರಕ್ಷಣಾ ಅಭಿಯಾ.
✡️ ವಿಧಾನವನ್ನ ಈ ರೀತಿ ವಿವರಿಸಲಾಗಿದೆ 🔯
1. ಉತ್ಸವ ಜಾಗ
ಗ್ರಾಮದ ದೇವಾಲಯ, ಸಮುದಾಯ ಭವನ ಅಥವಾ ಎಲ್ಲರೂ ಸೇರಬಹುದಾದ ಸ್ವಚ್ಛ ಸುಂದರ ಪರಿಸರ.
2. ಮಣ್ಣಿನ ಸಂಗ್ರಹ ಹಾಗೂ ಕಲಶ ಸ್ಥಾಪನೆ
ಕೃಷಿಕ ಬಂಧುಗಳು ಪರಿವಾರ ಸಹಿತವಾಗಿ ತಮ್ಮ ಜಮೀನಿನ ಒಂದು ಬೊಗಸೆ ಮಣ್ಣನ್ನು ಪೂಜಾ ಸ್ಥಳಕ್ಕೆ ತಂದು ಅಲಂಕರಿಸಲ್ಪಟ್ಟ ಜಾಗದಲ್ಲಿ ರಾಶಿ ಮಾಡುತ್ತಾ ಭೂಮಾತೆ ಗೋಮಾತೆ ಗಂಗಾಮಾತೆ ವನದೇವತೆ ಗ್ರಾಮದೇವತೆ ಕುಲದೇವರಿಗೆ ಜೈಕಾರ ಹಾಕುವುದು. ಮಣ್ಣಿನ ರಾಶಿಯ ಮೇಲೆ ತೆಂಗಿನಕಾಯಿ ಸಹಿತ ಕಲಶ ಸ್ಥಾಪನೆ ಮಾಡುವುದು.
3. ಅಲಂಕಾರ
ಪೂಜಾಸ್ಥಳ, ಮಣ್ಣಿನ ರಾಶಿ ಹಾಗೂ ಕಲಶವನ್ನು ರಂಗೋಲಿ,ಹೂ, ಅರಸಿನ ಕುಂಕುಮ ತಳಿರು ತೋರಣ ಬಾಳೆಕಂಬ, ಮಂಗಲ ದ್ರವ್ಯಗಳಿಂದ ಅಲಂಕಾರ ಮಾಡುವುದು.
4. ಪೂಜೆ ಮಾಡುವವರು
ಕನಿಷ್ಟ ಮೂರು ರೈತ ದಂಪತಿಗಳು ಪೂಜೆಯನ್ನು ನೆರವೇರಿಸುವುದು.
ಅವರು ಸ್ವಚ್ಛವಾಗಿ ಮಂಗಲ ವೇಶದಲ್ಲಿ ಪೂಜೆಗೆ ಕುಳಿತುಕೊಳ್ಳುವುದು.
5. ಗೋಪೂಜೆ
ಮಾತೆಯರಿಂದ,
ಕರು ಸಹಿತ ವಾಗಿರುವ ಗೋವಿಗೆ ಅಲಂಕಾರ, ಪೂಜೆ, ಗೋ ಗ್ರಾಸ ಅರ್ಪಣೆ.
ಈ ಸಮಯದಲ್ಲಿ ಗೋ ಸಾವಿತ್ರಿ, ಗೋವಿನ ಹಾಡುಗಳನ್ನು ಹೇಳಬಹುದು.
6. ಕಲಶಪೂಜೆ
ಕಲಶಕ್ಕೆ ಅಲಂಕಾರ ಪೂಜೆ (ಗಂಗೇಚ ಯಮುನೇಚೈವ)
7 ಭೂಮಿ ಪೂಜೆ
ರಾಶಿ ಮಾಡಿರುವ ಮಣ್ಣಿನ ಮೇಲೆ ನೀರು ಅಥವಾ ಪಂಚಗವ್ಯ ಅಥವಾ ಜೀವಾಮೃತ ದಿಂದ ರೈತ ದಂಪತಿಗಳು ಅಭಿಷೇಕ ಮಾಡುತ್ತಿರುವಾಗ ಕೆಳಗಿನ ಮಂತ್ರಗಳನ್ನು ಎಲ್ಲರಿಂದಲೂ ಗಟ್ಟಿಯಾಗಿ ಹೇಳಿಸುವುದು.
8. ಮಂತ್ರಗಳು
ಮಾತಾ ಭೂಮಿ: ಪುತ್ರೋಹಂ ಪೃಥಿವ್ಯಾ:
ಅರ್ಥ : ಭೂಮಿ ನನ್ನ ತಾಯಿ ಹಾಗೂ ನಾನು ಅದರ ಪುತ್ರ.
ಗಂಧದ್ವಾರಾಂ
ದುರಾಧರ್ಷಾಂ
ನಿತ್ಯಪುಷ್ಟಾಂ
ಕರೀಷಿಣೀಂ.
ಅರ್ಥ ಸಮಸ್ತ ಜೀವಿಗಳಿಗೆ ಪೋಷಣೆ ಮಾಡುವಂತಹ ಅಜೇಯ ಗಂಧವತೀ ಪೃಥ್ವಿಗೆ ಗೋಮಯವನ್ನು ಉಪಯೋಗಿಸಿ ನಾವು ನಿತ್ಯ ಪುಷ್ಟಿಗೊಳಿಸೋಣ.
ಜನನೀ ಜನ್ಮಭೂಮಿಶ್ಚ
ಸ್ವರ್ಗಾದಪಿ ಗರೀಯಸೀ
ಅರ್ಥ : ಜನ್ಮ ಕೊಟ್ಟ ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು.
ಸಾ ನೋ ಭೂಮಿಸ್ತ್ಟಿಷಿಂ
ಬಲಂ ರಾಷ್ಟ್ರೇ
ದದಾತ್ತೂತ್ತಮೇ
ಅರ್ಥ : ಭೂಮಿತಾಯಿ ನಮ್ಮ ರಾಷ್ಟ್ರದಲ್ಲಿ ತೇಜಸ್ಸು ಮತ್ತು ಶಕ್ತಿಯನ್ನು ಸ್ಥಾಪಿಸಲಿ.
ಗ್ರೀಷ್ಮಸ್ತೇ ಭೂಮೇ ವರ್ಷಾಣಿ
ಶರದ್ಧೇಮಂತಃ
ಶಿಶಿರೋ ವಸಂತಃ
ಋತವಸ್ತೇ ವಿಹಿತಾ ಹಾಯನೀರಹೋರಾತ್ರೇ
ಪೃಥಿವೀ ನೋದುಹಾತಾಮ್
*ಅರ್ಥ*: ಹೇ ಮಾತೆಯೇ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ, ವಸಂತ ಆರು ಋತುಗಳು, ವರ್ಷ ಸಮೂಹ, ದಿನ-ರಾತ್ರಿಗಳು ಈ ಎಲ್ಲವೂ ಬ್ರಹ್ಮನಿಂದ ನಿನಗಾಗೆ ಸೃಷ್ಟಿಯಾಗಿವೆ. ಆದ್ದರಿಂದ ಈ ಎಲ್ಲವೂ ನಮ್ಮ ಮನೋರಥವನ್ನು ಈಡೇರಿಸಲಿ.
ಓಂ ದ್ಯೌ ಶಾಂತಿಃ
ಅಂತರಿಕ್ಷಂ ಶಾಂತಿಃ
ಪೃಥ್ವೀ ಶಾಂತಿರಾಪಃ ಶಾಂತಿಃ
ಓಷಧಯ ಶಾಂತಿಃ
ವನಸ್ಪತಯಃ ಶಾಂತಿಃ
ವಿಶ್ವೇ ದೇವಾಃ ಶಾಂತಿಃ
ಬ್ರಹ್ಮ ಶಾಂತಿಃ
ಸರ್ವಂ ಶಾಂತಿಃ
ಶಾಂತಿರೇವ ಶಾಂತಿಃ
*ಸಾ ಮಾ ಶಾಂತಿರೇಧಿ*|
ಓಂ ಶಾಂತಿಃ ಶಾಂತಿಃ ಶಾಂತಿಃ
ಅರ್ಥ : ದ್ಯೌ ಲೋಕ ಶಾಂತಿಯಾಗಲಿ, ಅಂತರಿಕ್ಷ ಶಾಂತವಾಗಲಿ, ಪೃಥ್ವಿ ಶಾಂತವಾಗಲಿ, ಜಲ ಶಾಂತವಾಗಲಿ, ಔಷಧಗಳು ಶಾಂತವಾಗಲಿ, ವನಸ್ಪತಿಗಳು ಶಾಂತವಾಗಲಿ, ಸಮಸ್ತ ದೇವತೆಗಳು ಶಾಂತವಾಗಲಿ, ಬ್ರಹ್ಮ ಶಾಂತವಾಗಲಿ, ಸರ್ವವೂ ಶಾಂತವಾಗಲಿ ಮತ್ತು ಆ ಶಾಂತಿ ನನ್ನಲ್ಲೂ ನಿರಂತರ ನೆಲೆಸಲಿ.
ಭೂಮಿಃ ಸ್ವರ್ಗತಾಮ್ ಯಾತು
ಮನುಷ್ಯೋ ಯಾತುದೇವತಾಂ
ಧರ್ಮೋ ಸಫಲತಾಂ ಯಾತು
ನಿತ್ಯಂ ಯಾತು ಶುಭೋದಯಃ
*ಅರ್ಥ*: ಭೂಮಿ ಸ್ವರ್ಗವಾಗಲಿ, ಮನುಷ್ಯ ದೇವತೆಯಾಗಲಿ, ಧರ್ಮ ಸಫಲವಾಗಲಿ, ನಿತ್ಯ ಶುಭವಾಗಲಿ.
ಭೂ ಮಾತಾ ಕೀ ಜಯ್
ಗೋ ಮಾತಾ ಕೀ ಜಯ್
ಗ್ರಾಮದೇವತಾ ಕೀ ಜಯ್
ಭಾರತ ಮಾತಾ ಕೀ ಜಯ್
9. ಭಜನೆ ನೈವೇದ್ಯ ಧೂಪ ಮಂಗಳಾರತಿ
10. ಪ್ರಸ್ತಾವನೆ
ಮಾತನಾಡುವ ಬಿಂದುಗಳನ್ನು ನೀಡಲಾಗಿದೆ. ಸಾಧಕ ಕೃಷಿಕರು ಮಾತನಾಡಿಸುವುದು ಉತ್ತಮ.
11. ಜಾಗೃತಿ ನಾದ
3 ನಿಮಿಷ ಗಳ ಕಾಲ ಶಂಖ, ಜಾಗಟೆ, ಘಂಟೆ,ಜನಪದ ವಾದ್ಯಗಳಿಂದ ಜಾಗೃತನಾದ ಮಾಡುವುದು
12 ಸಂಕಲ್ಪ
ಎಲ್ಲರೂ ಭೂಮಿಯನ್ನು ಸ್ಪರ್ಶಿಸುತ್ತಾ
ಒಬ್ಬರು ಹೇಳಿ ಹೇಳಿಕೊಟ್ಟ ನಂತರ ಸಾಮೂಹಿಕವಾಗಿ ಹೇಳುವುದು.
ಭಾರತ ನನ್ನ ದೇಶ, ನನ್ನ ದೇಶದಲ್ಲಿ ನನ್ನ ಸ್ಥಾನ ಗ್ರಾಮ ಅಥವಾ ನಗರ ಎಲ್ಲೇ ಆಗಿರಲಿ ಭಾರತೀಯ ಸಂಸ್ಕೃತಿ ಹೇಳುವಂತೆ ಭೂಮಿಯ ಕುರಿತು ಮಾತೃ ಭಾವ ಹೊಂದಿರುವುದಕ್ಕೆ ನಾನು ಸದಾ ಕಟಿ ಬದ್ಧನಾಗಿರುತ್ತೇನೆ.
ಮಾತೃಭೂಮಿಯ ಬಗ್ಗೆ ನನಗಿರುವ ಆದರಾತ್ಮಕ ಭಾವನೆ ನನ್ನೆಲ್ಲ ಕ್ರಿಯೆ ಹಾಗೂ ಕರ್ತವ್ಯ ಪಾಲನೆಗಳ ಮೂಲಕ ಅಭಿವ್ಯಕ್ತಗೊಳ್ಳುತ್ತದೆ.
ಭೂಮಿಯ ಸುಪೋಷಣೆಗಾಗಿ ಹಾಗೂ ಸಂರಕ್ಷಣೆಗಾಗಿ ನನ್ನ ಆಜೀವನ ಕೊಡುಗೆ ಈ ರೀತಿ ಇರುತ್ತದೆ.
1. ಮಣ್ಣಿನ ಸವಕಳಿ ತಡೆಯುವೆನು.
2. ಮಣ್ಣಿನ ಫಲವತ್ತತೆಯ ಉಪಾಯಗಳನ್ನು ಕಾರ್ಯಾನ್ವಿತ ಮಾಡುವೆನು.
3. ರಾಸಾಯನಿಕ ಗೊಬ್ಬರ, ರಾಸಾಯನಿಕ ರೋಗನಿರೋಧಕ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುತ್ತಾ ಬರುವೆನು. ಸಂಪೂರ್ಣವಾಗಿ ನಿಲ್ಲಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡುವೆನು.
4. ಕೃಷಿ ನೀರಾವರಿಯಲ್ಲಿ ನೀರಿನ ಅಪವ್ಯಯ ತಡೆಯುವೆನು. ಮತ್ತು ಬೇಲಿಯಲ್ಲಿ ಗಿಡಗಳನ್ನು ಬೆಳೆಸುವೆನು.
ಈ ಕರ್ತವ್ಯಗಳ ಜೊತೆಗೆ ಭೂಮಿ ಸುಪೋಷಣೆಯ ಅನ್ಯ ಮಾರ್ಗಗಳನ್ನು ಅನುಸರಿಸುವೆನು.
ಭೂಮಿಗೆ ಹಾನಿಕಾರಕಗಳಾದ ಪ್ಲಾಸ್ಟಿಕ್, ಥರ್ಮೋಕೋಲ್ ಇತ್ಯಾದಿ ವಸ್ತುಗಳ ಬಳಕೆಯಲ್ಲಿ ಸಂಯಮ ತೋರುವೆನು.
ಭೂಮಿಗೆ ಹಾನಿಕಾರಕವಾದ ತ್ಯಾಜ್ಯ ವಸ್ತುಗಳ ಸುಯೋಗ್ಯ ಪದ್ಧತಿಯಿಂದ ನಿರ್ವಹಣೆ,
ಕಾಗದ ಮುಂತಾದ ಮರಗಳ ಸಂಹಾರದಿಂದ ಆಗುವ ವಸ್ತುಗಳನ್ನು ಅವಶ್ಯವಿದ್ದಾಗ ಮಾತ್ರ ಬಳಸುವುದು.
ಇವುಗಳ ಮರು ಬಳಕೆಯ ಬಗ್ಗೆ ಕಾಳಜಿ ವಹಿಸುವುದು.
ಗಿಡಗಳನ್ನು ನೆಡುವುದು,
ಅಡುಗೆ ಮನೆಯ ತ್ಯಾಜ್ಯವನ್ನು ಮಣ್ಣಿಗೆ ಸೇರಿಸುವುದು. ಈ ಎಲ್ಲಾ ಮಾರ್ಗೋಪಾಯಗಳನ್ನು ನಾನು ಸಂಪೂರ್ಣ ನಿಷ್ಠೆಯಿಂದ ಪಾಲನೆ ಮಾಡುತ್ತೇನೆ.
ಇದರಲ್ಲಿಯೇ ನನ್ನ ರಾಷ್ಟ್ರ ಹಾಗೂ ಭೂಮಾತೆಯ ಹಿತ ಅಡಗಿದೆ
ಜಯ್ ಹಿಂದ್
12. ಪ್ರಸಾದ ವಿತರಣೆ
ಸಾವಯವ ವಸ್ತುಗಳಿಂದ ತಯಾರಿಸಿದ ಪ್ರಸಾದ.
ವಿತರಣೆಗೆ ಪ್ಲಾಸ್ಟಿಕ್ ಬಳಸದೆ ಇರುವುದು.
13. ಮಂಗಲ ಮೃತ್ತಿಕಾ ವಿತರಣೆ
ನಂತರ ಊರಿನ ದೇಶಿ ರಾಸುಗಳ ಶೋಭಾಯಾತ್ರೆ ಮಾಡುವುದು, ಎಲ್ಲಾ ರೈತ ಬಾಂಧವರು ಪೂಜಿಸಿದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ತಮ್ಮ ತಮ್ಮ ಹೊಲಗದ್ದೆಗಳಿಗೆ ಸೇರಿಸುವುದು.
🌱 ರೈತರು ವರ್ಷವಿಡೀ.. ಪಂಚ ಮಹಾಭೂತಗಳ ಪರಿಶುದ್ಧತೆಯ ನಿಟ್ಟಿನಲ್ಲಿ.. ಕಾಯಕ ಮಾಡುತ್ತಾ.. ಮಾದರಿ ಜೀವನ ನಡೆಸುವುದು.
ಧನ್ಯವಾದಗಳು
✍🏽 ಡಾ. ಬಿ. ಯಂ ನಾಗಭೂಷಣ ಭೀಮಸಮುದ್ರ