Рет қаралды 138
ರಾಮನಗರ ಜಿಲ್ಲೆಯ ನಾಯಕರು ಬಂದು ತಮ್ಮ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಮನವಿ ಮಾಡಿದ್ದು, ಸಚಿವ ಸಂಪುಟದ ಮುಂದಿಟ್ಟು ತೀರ್ಮಾನ ಮಾಡುತ್ತೇವೆ. ಇನ್ನು ಕೇಂದ್ರ ಸಚಿವ ನಾವು ಅಧಿಕಾರಕ್ಕೆ ಬಂದರೆ ಪುನಃ ಹೆಸರನ್ನು ಕಿತ್ತಾಕುತ್ತೇವೆ ಎಂದು ಹೇಳಿದ್ದಾರೆ.ಆದರೆ, ಜನರು ಅವರಿಗೆ ಆಶೀರ್ವಾದವನ್ನೇ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಎಲ್ಲಾ ಮುಖಂಡರು ನಿನ್ನೆ ನನ್ನ ಬಳಿ ಬಂದಿದ್ದರು. ಮೊದಲಿನಿಂದಲೂ ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಗಬೇಕು ಎಂಬುದು ಅವರ ಇಚ್ಛೆಯಾಗಿದೆ. ಆ ಬಗ್ಗೆ ಮನವಿ ಕೊಟ್ಟಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟದ ಮುಂದಿಟ್ಟು ತೀರ್ಮಾನ ಮಾಡುತ್ತೇವೆ. ನಾವು ಬಂದರೇ ಹೆಸರು ಕಿತ್ತಾಕುತ್ತೇವೆ ಎಂದು ಹೇಳಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ತಾನೇ ಕಿತ್ತಾಕುವುದು. ಜನರು ಆಶೀರ್ವಾದ ಮಾಡಿದ ಕಾರಣ ನಾನು ಸಿಎಂ ಆಗಿದ್ದೇನೆ. ಇವರಿಗೆ ಜನರೇ ಆಶೀರ್ವಾದ ಮಾಡುವುದಿಲ್ಲ. ಇವರು ಇನ್ನೆಲ್ಲಿ ಸಿಎಂ ಆಗುತ್ತಾರೆ. ಹೆಸರು ಬದಲಾವಣೆ ಮಾಡುವುದು ಇವರ ಭ್ರಮೆ ಎಂದು ವ್ಯಂಗ್ಯವಾಡಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೈಟ್ ಹಂಚಿಕೆಯಲ್ಲಿ ಪಾರ್ವ ತಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಹಗರಣ ನಡೆದಿದ್ದು, ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆಗಿದ್ದಾರೆ. ನಿಮಗೆ ಎಷ್ಟು ಸಲ ಮುಡಾ ಬಗ್ಗೆ ಹೇಳುವುದು. ಮುಡಾದಲ್ಲಿ 50:50 ರದ್ದಾಗಿದೆ. ನನ್ನ ಹೆಂಡತಿಯ ವಿಚಾರವನ್ನ ವಿವಾದ ಮಾಡುತ್ತಿದ್ದಾರೆ. ನಾನು ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ. ನಮ್ಮ ಜಮೀನಿನನ್ನ ನಿಯಮಬಾಹಿರವಾಗಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಅದಕ್ಕೆ ಅವರೇ ತಪ್ಪಾಯಿತು ಎಂದು ಹೇಳಿ ಸೈಟ್ ಕೊಟ್ಟಿದ್ದಾರೆ. ಇದರಲ್ಲಿ ಯಾವ ವಿವಾದ ಇದೆ ಹೇಳಿ. ಸುಮ್ಮನೇ ಪ್ರತಿಭಟನೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.