Рет қаралды 6,226
ಕನ್ನಡಕ್ಕೆ ಹೊಸ ಹಾರ್ಸ್ ಪವರ್ ತುಂಬಿದ ಸುಬ್ಬಣ್ಣನ ಗೀತೆ!
ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ರಚಿಸಿದ "ಕಾಡು ಕುದುರೀ ಓಡಿ ಬಂದಿತ್ತ..." ಹಾಡು ಕನ್ನಡದ ಅವಿಸ್ಮರಣೀಯ ಗೀತೆಗಳಲ್ಲಿ ಒಂದು. ಈ ಹಾಡು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.
ಶಿವಮೊಗ್ಗ ಸುಬ್ಬಣ್ಣ (73) ತಮ್ಮ ಕಂಚಿನ ಕಂಠದಿಂದ ಹಾಡಿರುವ ಈ ಹಾಡಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. ಈ ಹಾಡಿನ ಬಳಿಕ ಅವರು ಕಾಡು ಕುದುರೆ ಸುಬ್ಬಣ್ಣ ಎಂದೇ ಜನಜನಿತರಾದರು.
ಇಲ್ಲಿ ಕಾಡು ಕುದುರೆ ಎಂಬುದನ್ನು ಒಂದು ಸಂಕೇತ ರೂಪಕವಾಗಿ ಕಂಬಾರರು ಚಿತ್ರಿಸಿದ್ದಾರೆ. ಈ ಹಾಡಿನ ಎರಡು ಚರಣಗಳನ್ನು ಸುಬ್ಬಣ್ಣ ಹಾಡಿದ್ದರೆ ಇನ್ನೊಂದನ್ನು ಕಲ್ಪನಾ ಶಿರೂರು ಹಾಡಿದ್ದಾರೆ. ವಿಶೇಷ ಎಂದರೆ ಈ ಹಾಡಿನ ಚಿತ್ರೀಕರಣ ನಡೆದದ್ದು ಬೆಂಗಳೂರಿನಲ್ಲಿ. 1978ರಲ್ಲಿ ಕಾಡು ಕುದುರೆ ಚಿತ್ರ ಬಿಡುಗಡೆಯಾಗಿತ್ತು.
ಕಂಬಾರರಿಗೆ ಜ್ಞಾನಪೀಠ ಬಂದಾಗ ಸುಬ್ಬಣ್ಣ ಸುವರ್ಣ ವಾಹಿನಿಯ ಸ್ಟುಡಿಯೋದಿಂದ ಮಾತನಾಡುತ್ತಿದ್ದರು. ಗೌರೀಶ್ ಅಕ್ಕಿಯೊಂದಿಗೆ ಮಾತನಾಡುತ್ತಿದ್ದ ಸುಬ್ಬಣ್ಣ ಅಂದು 1978ರಲ್ಲಿ ಹಾಡಿದ ಹುರುಪಿನಲ್ಲೇ 'ಕಾಡು ಕುದುರೆ' ಹಾಡನ್ನು ಹಾಡಿದರು. ಸುಬ್ಬಣ್ಣನ ಹಾರ್ಸ್ ಪವರ್ ಕೇಳುಗರನ್ನು ಮಂತ್ರಮುಗ್ಧಗೊಳಿಸಿತ್ತು. ಎಷ್ಟೇ ಆಗಲಿ ಕನ್ನಡ ಚಿತ್ರಗೀತೆಗಳಿಗೆ ಹೊಸ ಹಾರ್ಸ್ ಪವರ್ ತಂದ ಗೀತೆ ಇದಲ್ಲವೆ?
ಕಾಡು ಕುದುರೆ ಓಡಿ ಬಂದಿತ್ತಾ...
ಕಾಡು ಕುದುರೆ ಓಡಿ ಬಂದಿತ್ತಾ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಚಂಗನೆ ನೆಗೆದಿತ್ತ ||ಪ||
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈಹೈ ಅಂತ ಹಾರಿಬಂದಿತ್ತ ||1||
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ ||2||
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||3||