Рет қаралды 97,503
#ಲಕ್ಷ್ಮೀಶೋಭಾನ_ಹಾಡು
ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪಲ್ಲವಿ||
ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||೧||
ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಾಲಕ್ಷುಮಿ ಉದಿಸಿದಳು
ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||೨||
ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||೩||
ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ
ಪೀತಾಂಬರವನುಟ್ಟು ಮೆರೆದಳೆ ||೪||
ಒಂದು ಕರದಿಂದ ಅಭಯವನೀವಳೆ
ಮತ್ತೊಂದು ಕೈಯಿಂದ ವರಗಳ
ಕುಂದಿಲ್ಲಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ||೫||
ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲಕೆನಲು
ನಳನಳಿಸುವ ಮುದ್ದುಮುಖದ ಚೆಲುವೆ ಲಕ್ಷುಮಿ
ಸಲಹಲಿ ನಮ್ಮ ವಧೂವರರ ||೬||
ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾದೇವಿ
ತನ್ನ ಮನೆಯ ವಧೂ-ವರರ ಸಲಹಲಿ ||೭||
ಕುಂಭಕುಂಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ
ದಂಬೆ ವಧೂವರರ ಸಲಹಲಿ ||೮||
ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷುಮಿ
ಕಸ್ತೂರಿ ತಿಲಕ ಧರಿಸಿದಳೆ
ಕಸ್ತೂರಿ ತಿಲಕ ಧರಿಸಿದಳಾ ದೇವಿ
ಸರ್ವತ್ರ ವಧೂವರರ ಸಲಹಲಿ ||೯||
ಅಂಬುಜನಯನಗಳ ಬಿಂಬಾಧರದ ಶಶಿ-
ಬಿಂಬದಂತೆಸೆವ ಮೂಗುತಿಮಣಿಯ ಶಶಿ-
ಬಿಂಬದಂತೆಸೆವಮೂಗುತಿ ಮಣಿ ಮಹಲಕ್ಷುಮಿ
ಉಂಬುದಕೀಯಲಿ ವಧುವರರ್ಗೆ ||೧೦||
ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದೆಳೆ
ನೆತ್ತಿಯ ಮೇಲೆ ಧರಿಸಿದಳಾ ದೆವಿ ತನ್ನ
ಭಕ್ತಿಯ ಜನರ ಸಲಹಲಿ ||೧೧||
ಕುಂದ-ಮಂದರ-ಜಾಜೀ-ಕುಸುಮಗಳ ವೃಂದವ
ಚೆಂದದ ತುರುಬಿಗೆ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ-
ಯಿಂದ ವಧೂವರರ ಸಲಹಲಿ ||೧೨||
ಎಂದೆಂದಿಗು ಬಾಡದ ಅರವಿಂದದ ಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-
ಳಿಂದು ವಧೂವರರ ಸಲಹಲಿ ||೧೩||
ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ
ಭಾಮೆ ಮಹಲಕ್ಷುಮಿ ಧರಿಸಿದಳೆ
ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ
ಸೇವಕ ಜನರ ಸಲಹಲಿ ||೧೪||
ಈ ಲಕ್ಷುಮಿ ದೇವಿಯ ಕಾಲುಂಗರ ಘಲಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ||೧೫||
ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನತ ದೋಷಗಳನೆಣಿಸಿದಳು ||೧೬||
ಕೆಲವರು ತಲೆಯೂರಿ ತಪಗೈದು ಪುಣ್ಯವ
ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೆ ||೧೭||
ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು
ಸಲ್ಲದ ಪುರೋಹಿತಕ್ಕೊಳಗಾದರು ||೧೮||
ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ
ಕಾಮಾಂಧನಾಗಿ ಮುನಿಯ ಕಾಮಿನಿಗೈದನೊಬ್ಬ
ಕಾಮದಿ ಗುರುತಲ್ಪಗಾಮಿಯೊಬ್ಬ ||೧೯||
ನಶ್ವರೈಶ್ವರ್ಯವ ಬಯಸುವನೊಬ್ಬ ಪರ-
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ
ಅದೃಶ್ಯಾಂಘ್ರಿಯೊಬ್ಬ ಒಕ್ಕಣನೊಬ್ಬ ||೨೦||
ಮಾವನ ಕೊಂದೊಬ್ಬ ಮರುಳಾಗಿಹನು
ಗಾಢ ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ||೨೧||
ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲ್ಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ||೨೨||
ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-
ತಾಳಕ್ಕೆ ಇಳಿದ ಗಡ ||೨೩||
ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದಲಿ ತೊಲಗಿಸುವ
ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ||೨೪||
ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ
ವಿಕೃತಿಗೊಳಾಗಿ ಭವದಲ್ಲಿ
ಸುಖದುಃಖವೆಂಬ ಬೊಮ್ಮಾದಿ ಜೀವರು
ದುಃಖಕ್ಕೆ ದೂರೆನಿಪ ಎನಗೆಣೆಯ ||೨೫||
ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ
ಒಬ್ಬನಾವನಿಗೆ ಶಯನಾಹ
ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ
ಅಬ್ಬರದಲಾವಾಗ ಸುಳಿವರು ||೨೬||
ಒಬ್ಬನಾವನ ನಾಮಕಂಜಿ ಬೆಚ್ಚುವ ಗಾಢ
ಸರ್ವರಿಗಾವ ಅಮೃತವ
ಸರ್ವರಿಗಾವ ಅಮೃತವನುಣಿಸುವ ಅವ-
ನೊಬ್ಬನೆ ನಿರನಿಷ್ಟ ನಿರವದ್ಯ ||೨೭||
ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನಬಂದಂತೆ ನುಡಿಯದಿರು ||೨೮||
ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೨೯||
ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿದ್ದ ಹರಿಗೆ ದುರಿತವ
ಭಾವಜ್ನರೆಂಬರೆ ಆಲದೆಲೆಯ ಮೆಲೆ
ಶಿವನ ಲಿಂಗವ ನಿಲಿಸುವರೆ ||೩೦||