Рет қаралды 12,392
ವೇದಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಉಪನಿಷತ್ಗಳು (ದೇವನಾಗರಿ: उपनिषद्, "ಉಪನಿಷದ್" ಎಂದೂ ಬರೆಯುತ್ತಾರೆ) ಎಂದು ಕರೆಯುತ್ತಾರೆ. ಉಳಿದ ಮೊದಲ ಮೂರು ಭಾಗಗಳೆಂದರೆ ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು. ಆದ್ದರಿಂದಲೇ ಉಪನಿಷತ್ತುಗಳಿಗೆ ವೇದಾಂತವೆಂಬ ಹೆಸರೂ ರೂಢಿಯಲ್ಲಿದೆ. ಉಪನಿಷತ್ತುಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವೇದಧರ್ಮದ ಅತ್ಯುನ್ನತ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಮೋಕ್ಷ ಶಾಸ್ತ್ರಗಳೆನ್ನಿಸಿಕೊಂಡಿರುವ ಇವು ವೇದಗಳ ಸಾರಸರ್ವಸ್ವವಾಗಿ ಮಾನವನನ್ನು ಅಮೃತತ್ವಕ್ಕೆ ಒಯ್ಯುವ ಹಂತಪಂಕ್ತಿಗಳೆನ್ನಬಹುದು. ಇವುಗಳಲ್ಲಿ ವಿಚಾರದ ಅಂತ್ಯವನ್ನು ಮೀರಿ ಹೋಗಿರುವ ಮಹಾಮಹಿಮರ, ಋಷಿಗಳ, ಮಂತ್ರದ್ರಷ್ಟಾರರ, ಅಂತರ್ದೃಷ್ಟಿ ಗೋಚರವಾದ ಪರಬ್ರಹ್ಮವಸ್ತುವಿನ ಸ್ವರೂಪ ನಿರೂಪಣೆ ದಿವ್ಯಜ್ಯೋತಿಯಂತೆ ಬೆಳಗುತ್ತಿದೆ. ಇವು ಭಾರತೀಯ ದರ್ಶನಗಳೆಲ್ಲಕ್ಕೂ ಸಿದ್ಧಾಂತಗಳೆಲ್ಲಕ್ಕೂ ಮೂಲವಾದ ತತ್ತ್ವ ತರಂಗಗಳ ಪಾವನ ಬುಗ್ಗೆಗಳಂತಿವೆ. ಅಂತೆಯೇ ವಿದ್ವಾಂಸರು ಇವನ್ನು ವೇದಗಳೆಂಬ ಪರ್ವತಪಂಕ್ತಿಗಳಲ್ಲಿನ ಗಗನಸ್ಪರ್ಶಿ ಶಿಖರಗಳೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಅಡಗಿರುವ ಮಹತ್ತ್ವವನ್ನು, ಆತ್ಮ ಪರಮಾತ್ಮ ಜ್ಞಾನವನ್ನು, ಗುರುವಿನ ಪದತಲದಲ್ಲಿ ಕುಳಿತು ಭಕ್ತಿಯಿಂದ ಕೇಳಿ ತಿಳಿಯಬೇಕಾಗಿರುವುದರಿಂದ ಈ ಅರ್ಥವನ್ನೊಳಗೊಂಡ ಉಪನಿಷತ್ ಎಂಬ ಹೆಸರು ಅನ್ವರ್ಥವಾಗಿದೆ. ಇವುಗಳಲ್ಲಿ ಬಹುಭಾಗ ಗುರುಶಿಷ್ಯರ ಸಂವಾದ ರೂಪದಲ್ಲಿದೆ. ಇವುಗಳು ವೇದಾಂತದ ಮೂಲ ಉಪದೇಶಗಳನ್ನು ಹೊಂದಿರುವ ಹಿಂದು ಧರ್ಮಗ್ರಂಥಗಳಾಗಿವೆ .[೧]ಸಾಂಪ್ರದಾಯಿಕವಾಗಿ ಇವುಗಳಿಗೆ ಯಾವುದೇ ಲೇಖಕರಿಲ್ಲ. ಇವುಗಳನ್ನು ಶೃತಿ ಗಳ ವರ್ಗಕ್ಕೆ ಸೇರಿಸುತ್ತಾರೆ.ಇವು ಸಂಸ್ಕೃತ ಸಾಹಿತ್ಯದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ ಬೃಹದಾರಣ್ಯಕ ಮತ್ತು ಛಾಂದೊಗ್ಯ ಉಪನಿಷತ್ಗಳು, ಬ್ರಾಹ್ಮಣಗಳ ಮತ್ತು ಅರಣ್ಯಕಗಳ ಕಡೆಯ ಕಾಲಕ್ಕೆ (ಅಂದಾಜು ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ. ಉಪನಿಷತ್ತುಗಳು ನೂರಾರು ಇದ್ದರೂ ಮುಖ್ಯ ವಾದವುಗಳು (ಅಂದರೆ ಹಳೆಯವು) ೧೧ ಮಾತ್ರ. ಮುಖ್ಯ ಉಪನಿಷತ್ತುಗಳು ಬುದ್ಧಪೂರ್ವ ಕಾಲದಲ್ಲಿ ರಚಿಸಲ್ಪಟ್ಟಿದ್ದರೆ, ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್ಗಳು ಹಿಂದು ತತ್ವಶಾಸ್ತ್ರದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ ಮಾರ್ಟಿನ್ ಸೇಮೋರ್-ಸ್ಮಿತ್ ಪ್ರಕಾರ ಇವುಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ೧೦೦ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ತತ್ವಶಾಸ್ತ್ರಜ್ಞ ಹಾಗೂ ಭಾಷ್ಯಕಾರರಾದ ಶಂಕರಾಚಾರ್ಯರು ಹನ್ನೊ